top of page

ಆ ಭಾವ... ಆ ಬದುಕು...

ಪರಿವಿಡಿ
1. ವ್ಯಾಸ    
2. ದುಷ್ಯಂತ
3. ಭೀಷ್ಮಾಚಾರ್ಯ
4. ಧೃತರಾಷ್ಟ್ರ
5. ಪಾಂಡು
6. ದ್ರೋಣಾಚಾರ್ಯ    
7. ಕರ್ಣ    
8. ಧರ್ಮರಾಯ
9. ದುರ್ಯೋಧನ
10. ಭೀಮಸೇನ
11. ಅರ್ಜುನ
12. ಏಕಲವ್ಯ
13. ಅಶ್ವತ್ಥಾಮ
14. ಅಭಿಮನ್ಯು
15. ಶ್ರೀಕೃಷ್ಣ

ಭೀಷ್ಮಾಚಾರ್ಯ  [ವಿಪರ್ಯಾಸದ ಪಿತಾಮಹ]

        ಬದುಕು ಎನ್ನುವ ವ್ಯಾಪ್ತಿಗೆ ಹತ್ತು-ಹಲವು ಅರ್ಥಗಳಿವೆ. ಅದರಲ್ಲಿ ಬಹಳ ಮುಖ್ಯವಾದುದು `ತ್ಯಾಗ’ ಎನ್ನುವ ಭಾವ. ಈ ತ್ಯಾಗದ ಅರ್ಥಕ್ಕೆ ಸಂವಾದಿ, ಅನ್ವರ್ಥ ಎನ್ನುವಂತೆ ತನ್ನ ಇಡೀ ಬದುಕನ್ನು ರೂಪಿಸಿಕೊಂಡು ತನ್ನಂತೆ ತಾನೊಬ್ಬನೇ ಎನ್ನುವ ಪಾತ್ರವೊಂದು ಭೀಷ್ಮನ ಹೆಸರಿನಿಂದ ಮಹಾಭಾರತದಲ್ಲಿ ಜೀವ ತಳೆಯುತ್ತದೆ.

        ಭೀಷ್ಮ ಎನ್ನುವ ಪಾತ್ರವೇ ಒಂದು ಜೀವನ ಕ್ರಮ, ಮಾದರಿ, ಆದರ್ಶ ಎಂದೆಲ್ಲಾ ಗ್ರಹಿಸುವಂತೆಯೇ ಬೆಳೆಯುತ್ತಾ, ಆ ಕಾರಣದಿಂದಲೇ ‘ಆಚಾರ್ಯ’ ಎನ್ನುವ ಅಭಿಧಾನಕ್ಕೆ ಸಲ್ಲುವುದಾಗುತ್ತದೆ.

        ಮಹಾಭಾರತ ಮತ್ತೇನೋ ಆಗಬಹುದಿದ್ದ ಸಾಧ್ಯತೆಯ ದಿಕ್ಕು ತಪ್ಪಿಸಿದ ಪಾತ್ರವಾಗುವ ಭೀಷ್ಮ, ಕುರುಕ್ಷೇತ್ರವೆಂಬ ಮಹಾಸಂಗ್ರಾಮದ ಕಲ್ಪನೆಯಿಂದಲೇ ಆಚೆ ನಿಲ್ಲಿಸಬಹುದಾದ ಶಕ್ತಿಯಿದ್ದವನು, ಆದರೆ ಅದಕ್ಕಿಂತ ದೊಡ್ಡದಾದ ತುರ್ತನ್ನು ಕರ್ತವ್ಯದ ಹೆಸರಿನಿಂದಲೇ ಎದುರಾಗಿ, ಅದನ್ನು ನಿಭಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ, ತನ್ನ ಬದುಕನ್ನೇ ಮೇಣ ಮಾಡಿಕೊಂಡು ನಿರಂತರವಾಗಿ ಉರಿಯುತ್ತಲೇ ಮತ್ತಿತರರ ಬಾಳಿಗೆ ಬೆಳಕು ನೀಡುವ ತಹತಹಿಕೆಯಲ್ಲಿ ಕರಗಿಹೋದ ಪಾತ್ರ ಭೀಷ್ಮನದು.
ತನ್ನ ವ್ಯಕ್ತಿತ್ವದ ಕಾರಣದಿಂದಲೇ ದೈವಸಮಾನವಾದ ಭಾವ-ನಿಯಮಗಳನ್ನು ಹೊಂದಿದವನಾಗಿ ದೇವವ್ರತನೆಂಬ ಅಭಿಧಾನಕ್ಕೆ ಪಾತ್ರನಾಗುವ ಭೀಷ್ಮ ಗಂಗಾಸುತ, ಶಂತನು ಚಕ್ರವರ್ತಿಯ ಮಗ, ಎಂಬೆಲ್ಲಾ ಹಿರಿಮೆಗಳಿಂದಾಚೆಗೂ ವ್ಯಕ್ತಿಗತ ಶ್ರೇಷ್ಠತೆಯ ಕಾರಣದಿಂದಲೇ ಅತ್ಯುನ್ನತಿಯ ಪದವಿಯನ್ನು ಹೊಂದುತ್ತಾನೆ.

        ಯಾವುದೂ ತನ್ನದಲ್ಲ, ತನಗಲ್ಲ ಎನ್ನುವ ನಿರ್ಲಿಪ್ತತೆಯ ನಡುವೆಯೂ ಅದು ತನ್ನವರೆಂದ ಇತರರಿಗಾಗಿ ಉಳಿಯಬೇಕು, ಬೆಳೆಯಬೇಕು, ಅದು ಶ್ರೇಷ್ಠವಾಗಬೇಕು, ಕೀರ್ತಿಯಾಗಬೇಕು, ಸಾರ್ಥಕವೇ ಆಗಬೇಕು ಎಂಬೆಲ್ಲಾ ಸಮಷ್ಟಿ ಚಿಂತನೆಯ ಉತ್ಕರ್ಷದ ನೆಲೆಯಿಂದಲೂ ಭೀಷ್ಮ ಕಳೆದುಕೊಳ್ಳುತ್ತಾ, ಮತ್ತೆ ಮತ್ತೆ ನೋಯುತ್ತಾ, ಚಿರಂಜೀವಿಯಾಗುವ ಸಾಧ್ಯತೆಯಿಂದಲೇ ತಪ್ಪಿಸಿಕೊಂಡು ಸಾವಿನೆಡೆಗೆ ಸಾಗುತ್ತಾನೆ.
 
        ಪರಶುರಾಮನ ಶಿಷ್ಯನಾಗಿ, ಮಹಾರಥಿಯಾಗುವ ಭೀಷ್ಮನಿಗೆ ಇಚ್ಛಾಮರಣಿಯಾಗುವ ವರ, ಅಂದರೆ ಚಿರಂಜೀವತ್ವದ ಇನ್ನೊಂದು ಪರ್ಯಾಯ ತಾಯಿಯಿಂದ ಸಂದಿರುವುದಾದರೂ, ಹಕ್ಕುಬದ್ಧ ಸಿಂಹಾಸನದಿಂದ ವಂಚಿತನಾಗುತ್ತಾನೆ. ಅದರ ವಿಪರ್ಯಾಸವಾದರೂ ಮಗನನ್ನು ಅಪಾರ ಪ್ರೀತಿಸುವ ತಂದೆಯಿಂದಲೇ ಘಟಿಸುತ್ತದೆನ್ನುವುದು ಮತ್ತೊಂದು ವಿಡಂಬನೆ....

        ವಯಸ್ಸಿಗೆ ಬಂದ ವೀರ-ಧೀರನಾದ, ಪಟ್ಟಕ್ಕೆ ಯೋಗ್ಯನಾಗಿಯೂ ಸಲ್ಲಬಹುದಾಗಿದ್ದ ಮಗನಿಗೆ ಸಿಂಹಾಸನವನ್ನು ವಹಿಸಿ, ಮದುವೆ ನಡೆಸಿ ತಾನು ಸಂತೃಪ್ತಿಯಿಂದ ನೋಡಿ ಬದುಕಬಹುದಾದ ಕಾಲದಲ್ಲೇ ಅಪ್ಪ ಶಂತನುಮಹಾರಾಜ ಸತ್ಯವತಿಯನ್ನು ಮೋಹಿಸುತ್ತಾನೆ. ರಾಜತ್ವದ ಅಹಂಕಾರದ ಮೋಹ ಮದುವೆಯ ಅನಿವಾರ್ಯತೆಯನ್ನು ಅವನ ಮುಂದಿಡುವಾಗ ಅದರಿಂದ ಪಾರಾಗಲಾರದ ಮಿತಿಯಲ್ಲೇ ರಾಜ ತೊಳಲುತ್ತಾನೆ. ಅಪ್ಪನ ವಯಸ್ಸನ್ನು ಮೀರಿದ ವಾಂಛಲ್ಯದ ತೊಳಲಾಟಗಳು ಮಗನ ಬದುಕಿನ ನಾಳಿನ ದಿನಗಳಲ್ಲಿ ಮುಳ್ಳಾಗುವ ಕ್ರಿಯೆಯಾಗುವುದು, ಭೀಷ್ಮನನ್ನು ಮೀರಿದ ಮಹಾಭಾರತದ ಚಲನೆಗೆ ಕಾರಣವಾಗಿಬಿಡುತ್ತದೆ.

        ಶಂತನುವಿನ ಮದುವೆ ವ್ಯಕ್ತಿನಿಷ್ಠನೆಲೆಯದ್ದಾಗುವಂತಿಲ್ಲ, ಅದು ಅವನನ್ನು ದಾಟಿ ಇಡೀ ರಾಜತ್ವದ ವಾರಸುದಾರಿಕೆಯನ್ನೇ ಕೇಳುವಾಗ ಶಂತನು ಒಬ್ಬ ಪರಿಪೂರ್ಣ ರಾಜನಾಗಿ ಉಳಿದು ತನ್ನತನವನ್ನು ಕಾಯ್ದುಕೊಳ್ಳಬಹುದಿತ್ತು. ಅದಾಗಲಿಲ್ಲ ಅವನೊಳಗಿನ ವ್ಯಾಮೋಹವೇ ಮುಖ್ಯವಾಗಿಬಿಡುತ್ತದೆ. ದೇವಗಂಗೆಯನ್ನೇ ಹೊಂದಿ ಸುಖಪಟ್ಟವನು ಬೆಸ್ತರಕನ್ಯೆಯ ಸೌಂದರ್ಯದಿಂದ ಪಾರಾಗುವುದಾಗುವುದಿಲ್ಲ, ಮನ್ಮಥನೇ ವಿಜೃಂಭಿಸುತ್ತಾನೆ.

        ಅಪ್ಪ, ಮಗನಿಗೆ ಮಾಡಬೇಕಿದ್ದ ಕರ್ತವ್ಯವನ್ನು ಮಗ ಅಪ್ಪನಿಗಾಗಿ ನೆರವೇರಿಸಲು ಬದ್ಧನಾಗುತ್ತಾನೆ. ತಂದೆಯ ವಿವಾಹ ಮಾಡುವುದು ಅವನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆ ವಿವಾಹ ಕೇವಲ ಗಂಡು-ಹೆಣ್ಣಿನ ಪರಸ್ಪರ ಎನ್ನುವ ಸಂಬಂಧದ ಮಿತಿಗೆ ನಿಲ್ಲುವಂತಿರಲಿಲ್ಲ, ಸಕಾಲಿಕವಲ್ಲದ ಕಾರಣವೂ ಇದ್ದೀತು. ಈ ಮದುವೆ ನೇರವಾಗಿ ಭೀಷ್ಮನ ಭವಿಷ್ಯವನ್ನೇ ಬಲಿ ಕೇಳುವುದಾಗುತ್ತದೆ. ಭೀಷ್ಮನಾದರೂ ಮತ್ತೆ ಅಪ್ಪನಿಗಾಗಿಯೇ ಯುವರಾಜತ್ವದ ಕರ್ತವ್ಯದಿಂದ ವಿಮುಖನಾಗಿಬಿಡುತ್ತಾನೆ. ಅದರಿಂದಾಗಬಹುದಾದ ಯಾವ ಅನಾಹುತದ ಕಲ್ಪನೆಯೂ ಬಹುಶಃ ಅವನಿಗೆ ದೊಡ್ಡದಾಗುವುದಿಲ್ಲ ವೃದ್ಧನಾದ ಅಪ್ಪನ ಆಸೆಗೆ ತಾರುಣ್ಯದ ಮಗನ ಆಸೆಗಳೇ ಬಲಿಯಾಗುವುದಾಗುತ್ತದೆ.

        ತಂದೆಯನ್ನು ಉಳಿಸಿಕೊಳ್ಳುವಲ್ಲಿಯೇ ತನ್ನ ರಾಜ್ಯದ ಹಿತಕಾಯುವ ಉದ್ದೇಶವಿದ್ದಂತೆ ಆಲೋಚಿಸುವ ಭೀಷ್ಮ `ತ್ಯಾಗದ’ ಮೊದಲ ಹೆಜ್ಜೆಯೊಂದಿಗೆ ನಾಳಿನ ದಿನಗಳಲ್ಲಿ ಕುರುಕ್ಷೇತ್ರ ಮಹಾಸಂಗ್ರಾಮಕ್ಕೆ ರಹದಾರಿ ತೆರೆದು ಬಿಡುತ್ತಾನೆನ್ನಬಹುದು.

        ತಮ್ಮ ತಪ್ಪಲ್ಲದ ಕಾರಣದಿಂದಲೂ ಜೀವನವನ್ನೇ ತಪಸ್ಸುಮಾಡಿ ಕೊಳ್ಳಬೇಕಾದ ಪಾತ್ರಪರಂಪರೆಗಳನ್ನೇ ಮಹಾಭಾರತ ಸೃಷ್ಟಿಸುತ್ತದೆ. ಆದರಲ್ಲಿ ಭೀಷ್ಮನ ಪಾತ್ರವೇ ಮೊದಲ ಸಾಲಿನಲ್ಲಿ ನಿಲ್ಲುವಂತಹುದು.

        ತಂದೆ ಅಥವಾ ಮಹಾರಾಜ ಕರ್ತವ್ಯದಿಂದ ವಿಮುಖನಾಗುವ ಹೆಜ್ಜೆಗಳಲ್ಲೇ ಮಗನ ಜವಾಬ್ದಾರಿಗಳು ಹೆಚ್ಚಾಗುತ್ತವೆ. ತಪ್ಪಿಸಿಕೊಂಡಷ್ಟು ಮತ್ತೆ ಮತ್ತೆ ತಾನೇ ಇಡೀ ಭಾರತದ ಪರಂಪರೆಗೆ ಹೆಗಲು ಕೊಡುವ, ಹಾಗೇ ಹೊಣೆಗಾರಿಕೆಯ ಕಾರಣಕ್ಕೆ ದುರಂತಗಳನ್ನು ತಪ್ಪಿಸಲಾಗದೇ ಒದ್ದಾಡುವ ಅನಿವಾರ್ತೆಗಳಿಗೂ ಭೀಷ್ಮ ಒಳಗಾಗುತ್ತಾನೆ.

        ಅಂದು ತಾನು ತಂದೆಯ ಪರವಾದÀ ತ್ಯಾಗಕ್ಕೆ ನಿಲ್ಲುವ ಹೊತ್ತಿಗೆ, ಬ್ರಹ್ಮಚಾರಿಯಾಗುವ ಪ್ರತಿಜ್ಞೆ ನಾಳಿನ ದಿನಗಳಲ್ಲಿ ಒಂದಷ್ಟು ವಿಲೋಮವನ್ನು, ದುರಂತದ ಪರಂಪರೆಯನ್ನು ಸೃಷ್ಟಿಸಬಹುದು ಎನ್ನುವ ಅರಿವಿದ್ದು ಭೀಷ್ಮ ಬಂಧನಕ್ಕೆ ಒಳಗಾಗುತ್ತಾನೆ. ಅವನೇ ಕಳಚಿಕೊಂಡ ನಾಳೆಗಳು ಅವನಿಂದ ಮತ್ತೆ ಎಷ್ಟೇ ಒತ್ತಡಗಳನ್ನು ಸೃಷ್ಟಿಸಿದರೂ ಒಳಗೊಳ್ಳಲಾಗದ ಪ್ರತಿಜ್ಞೆಯ ಸಂವಾದಿಯಾಗಿಯೇ ಭೀಷ್ಮನೆಂಬ ಅನ್ವರ್ಥವೂ ಉಳಿಯುವಂತಾಗುತ್ತದೆ.

        ಪ್ರತಿಜ್ಞೆಗಳ ಹೆಸರಿನಿಂದ ತಾನು ಎಲ್ಲದರಿಂದಲೂ ತಪ್ಪಿಸಿಕೊಂಡನೆ? ಎನ್ನುವುದಕ್ಕೆ ಭವಿಷ್ಯದಲ್ಲಿ ನೇತ್ಯಾತ್ಮಕವಾದ ಉತ್ತರಗಳೇ ಕಾದಿರುತ್ತವೆ. ಅವನು ಬಿಟ್ಟರೂ ಅವನನ್ನು ರಾಜಕಾರ್ಯಬಿಡುವಂತಿಲ್ಲ. ತನ್ನ ವಂಶದ ಹಿರಿಮೆ, ಶ್ರೇಷ್ಠತೆಗಳು ಕಾಯಲೇಬೇಕೆಂಬ ಭೀಷ್ಮನ ವಂಶ ಪ್ರೀತಿಯೂ ಅವನನ್ನು ರಾಜಕಾರಣದಿಂದ ತಪ್ಪಿಸಿಕೊಳ್ಳಲಾಗದಂತೆ ಪ್ರವಾಹಕ್ಕೆ ಸೆಳೆದುಬಿಡುತ್ತದೆ.

       ಅಪ್ಪನಿಗಾಗಿ ಅವನು ಮೆಚ್ಚಿದವನನ್ನು ತಂದು ಮದುವೆ ಮಾಡಿದ ಮಗ ಮುಂದೆ ಮತ್ತದೇ ಪರಂಪರೆಯ ಕೊಂಡಿಯನ್ನೇ ಹಿಡಿಯಬೇಕಾಗಿದೆ. ಸತ್ಯವತಿಯ ಮಗ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಲು ಕಾಶೀರಾಜನ ಮಕ್ಕಳನ್ನು ಹೊತ್ತುತರುವಲ್ಲಿಯೂ ಭೀಷ್ಮನೇ ಮುಂದಾಗಬೇಕಿದೆ. ಹೀಗೆ ರಾಜಕುಮಾರಿಯರನ್ನು ಸ್ವಯಂವರದಿಂದಲೂ ಹೊತ್ತುತರುವ ಕಾಯಕ ದಿಂದಲೇ ಭೀಷ್ಮ ಮಹಾಭಾರತದ ವ್ಯಾಪಕತೆಯ ಅನಿವಾರ್ಯವಾಗಿ ಬಿಡುತ್ತಾನೆ.

       ಈ ಪ್ರಸಂಗದ ಸರಿ-ತಪ್ಪುಗಳ ವಿವೇಚನೆಯಾಚೆಗೆ ವೀರತ್ವವನ್ನು, ಕ್ಷತ್ರಿಯತ್ವವನ್ನು ಮುಂದುಮಾಡಿಕೊಂಡೇ ತನ್ನನ್ನು ಸಮರ್ಥಿಸಿಕೊಳ್ಳುವ ಭೀಷ್ಮ, ತನ್ನ ಆ ಬಗೆಯ ನಿಲುವುಗಳಿಂದಲೇ ಅಂಬೆಯ ಶಾಪಕ್ಕೂ, ತನ್ಮೂಲಕ ಮನೋವ್ಯಾಕುಲಕ್ಕು ತುತ್ತಾಗಲೇಬೇಕು. ಮುಂದೆ ಇದು ಕರ್ಮಸಿದ್ಧಾಂತದಂತೆ ಭೀಷ್ಮನನ್ನು ಕಾಡಿಯೇ ತೀರುವುದಾಗುತ್ತದೆ. ಆತ್ಮಾವಲೋಕನದ ಅವಶ್ಯಕತೆಗಳು ಇದ್ದಲ್ಲೆಲ್ಲಾ ಬಹುಶಃ ಭೀಷ್ಮನ ಆತಂಕಗಳಿರುವುದು ಅಂಬೆಯ ಶಾಪದ ಅಂತರಾಳದಲ್ಲಿ ಎನ್ನುವುದನ್ನು ಗ್ರಹಿಸಲೇಬೇಕು. ಸಹಜ ಪ್ರಕ್ರಿಯೆಗಳನ್ನು ಮೀರುವುದರಿಂದ ಆಗಬಹುದಾದ ಅನಾಹುತಗಳನ್ನು ಇದು ಪ್ರತಿನಿಧಿಸಿದಂತಿದೆ.

        ತನ್ನ ವಂಶದ ಸಾಮ್ರಾಜ್ಯದ ಒಳಿತಿಗೆಂದೇ ಪ್ರಯತ್ನಿಸುವ ಅವನ ಶ್ರಮಗಳಾವುವೂ ವಿಚಿತ್ರವೀರ್ಯನನ್ನು ಸಾವಿನಿಂದ ಪಾರುಮಾಡುವುದಾಗಲಿಲ್ಲ, ಅದರೊಂದಿಗೆ ಅವನನ್ನು ಚಂದ್ರವಂಶದ ನಿರಂತರತೆಯಾಗುವಲ್ಲಿ ಉಳಿಸಲಾಗುವುದಿಲ್ಲ. ಪದೇ ಪದೇ ಅವನ ಪ್ರತಿಜ್ಞೆಯ ಕಾರಣವೇ ಸಾಮ್ರಾಜ್ಯಶಾಹಿಗೆ ಹೊಸ ಅರ್ಥವನ್ನು ವಂಶದ ವಾರಸುದಾರಿಕೆಗೆ ವಿಚಿತ್ರವಾದ ಪರಿಸ್ಥಿತಿಯನ್ನು ನಿರ್ಮಾಣಮಾಡುವಂತಾಗುತ್ತದೆ.

        ಸಾಮಾಜಿಕ ಬದುಕಿನ, ಶ್ರೀಸಾಮಾನ್ಯನೊಬ್ಬನ ಬದುಕಿಗೆ ಯೋಚಿಸಲಾಗದ, ನೈತಿಕತೆಯ ಪ್ರಶ್ನೆಯಾಗುವ ಸಂಗತಿ ಇಲ್ಲಿ ಘಟಿಸುತ್ತದೆ. ಸತ್ಯವತಿಯ ಮೊದಲ ಮಗ, ವ್ಯಾಸನಿಂದ ವಂಶೋದ್ಧಾರದ ಕೆಲಸ ಅನಿವಾರ್ಯವೆನ್ನುವಂತೆ, ಶಾಸ್ತ್ರನೀತಿಯ ಸಮರ್ಥನೆಯೋಪಾದಿಯಲ್ಲಿ ಘಟಿಸುತ್ತದೆ. ಶಂತನು ಮಹಾರಾಜನ ಮೋಹ ಉಂಟುಮಾಡಿದ ಒಂದು ಘಟನೆ ಮುಂದಕ್ಕೆ ಒಂದು ಕ್ರಮ ಮೀರಿದ ಪರಂಪರೆಗೆ ನಾಂದಿಹಾಡಿದಂತೆ, ವಿಚಿತ್ರವಾದ ಹೊಸಮಾರ್ಗವನ್ನೇ ಉಂಟುಮಾಡಲು ಯತ್ನಿಸುತ್ತದೆ. ಇಂತಲ್ಲೆಲ್ಲಾ ಭೀಷ್ಮ ಅಸಹಾಯಕನಂತೆ, ಮೂಕಪ್ರೇಕ್ಷಕನಂತೆ ನಿರ್ಲಿಪ್ತವಾಗ ಬೇಕಾದ ವಿಪರ್ಯಾಸ ಘಟಿಸುತ್ತದೆ.
ಕಾಲದೊಂದಿಗೆ ಮಾಗುತ್ತಾ ಸಾಗುವ ಭೀಷ್ಮನ ಬದುಕಾದರೂ ವಿಶ್ರಾಂತ ಎನ್ನುವ ನಿರಾಳತೆಗಿಂತ ಭಿನ್ನವಾಗಿದೆ. ಪಾಂಡವ-ಕೌರವತನಗಳಿಂದಾಚೆಗೆ ಭೀಷ್ಮನ ವ್ಯಕ್ತಿತ್ವ ಹೊಸ ಬದ್ಧತೆಗಳಿಗೆ ಚಾಚಲೇಬೇಕಾದ ಅನಿವಾರ್ಯತೆಯನ್ನು ಮಹಾಭಾರತವೇ ಒಡ್ಡುತ್ತದೆ. ಅವನು, ಅಥವಾ ಅವನಂತಹ ಸಹೃದಯ ಮನಸ್ಸಿನ ಹಿರಿಯ-ಕಿರಿಯರಾದಿಯಾಗಿ ಯಾರೂ ನಿರೀಕ್ಷಿಸದ, ಬಯಸದ ಘಟನೆಗಳು ನಡೆಯುವಾಗ ಮೂಕ ಸಾಕ್ಷಿಗಳಾಗಿಯೇ ಉಳಿಯುವಂತಾಗುತ್ತದೆ.

        ತನ್ನ ಗುಣ-ವ್ಯಕ್ತಿತ್ವದ ಕಾರಣದಿಂದಲೇ ಇಚ್ಛಾಮರಣಿಯಾಗ ಬಹುದಾದ ವರಪಡೆದ ಭೀಷ್ಮನಿಗೆ ಅದು ಶಾಪದಂತೆಯೂ ಆಗಿರಬಹುದಾದ ಸಾಧ್ಯತೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಸ್ವಯಂ ಸೃಷ್ಟಿಸಿಕೊಂಡ ಅನಿವಾರ್ಯತೆ ಒಂದೆಡೆ, ವಂಶದ ಬಗೆಗಿನ ಅಭಿಮಾನ ಮತ್ತೊಂದೆಡೆ, ಇವುಗಳ ಜೊತೆಗೆ ತನ್ನ ನಂತರದ ಕಿರಿಯ ತಲೆಮಾರುಗಳೆಲ್ಲಾ ತನ್ನ ಕಣ್ಣೆದುರೇ ಸಾವಿನಕಡೆಗೆ ಮುಖಮಾಡುವಾಗ ಅಸಹಾಯಕನಾಗಿ ಉಳಿಯುತ್ತಾ ಭೀಷ್ಮ ಮತ್ತಷ್ಟು ಹಣ್ಣಾಗುತ್ತಾನೆ.

        ತಾನು ಬದುಕಿರುವಾಗಲೇ ತನ್ನೆದುರಿಗೆ ತನ್ನ ವಂಶ ನಾಶವಾಗುವುದನ್ನು ಆತ ಸಹಿಸುವುದು ಸಾಧ್ಯವಿಲ್ಲ. ಹಾಗೆಯೇ ತನ್ನ ಜೀವಿತಾವಧಿಯಲ್ಲೇ ಒಂದು ಭದ್ರ ಬುನಾದಿಯನ್ನು ವಂಶಕ್ಕೆ ಒದಗಿಸುವ ಆಸೆ, ಈ ಎರಡೂ ಆಲೋಚನೆಗಳು ಅವನನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

        ಹೀಗೆ ತನ್ನ ವಂಶದ ಪ್ರತಿಷ್ಠೆ ಕುರಿತ ಆಲೋಚನೆಗಳೇ ಅವನನ್ನು ಗಂಭೀರವಾಗಿ ಕಾಡುವುದಾದರೂ ಪಾಂಡವ-ಕೌರವರ ಕಲಹದಿಂದಾಗಿ ಅವು ಭಿನ್ನದಿಕ್ಕಿಗೆ ಮುಖಮಾಡುತ್ತವೆ.

        ಪಾಂಡುವನ್ನು ಕಳೆದುಕೊಂಡು ಕುಂತಿಯ ಆಶ್ರಯದಲ್ಲಿ ಬೆಳೆಯುವ ಐದು ಮಕ್ಕಳು, ತಂದೆಯ ಮಾರ್ಗದರ್ಶನವಿಲ್ಲದೆ ನರಳುವುದು ಒಂದೆಡೆಯಾದರೆ, ಅಂಧನಾದ ಧೃತರಾಷ್ಟ್ರ ಪುತ್ರ ವ್ಯಾಮೋಹದಲ್ಲಿ ಮಕ್ಕಳನ್ನು ನಿಯಂತ್ರಿಸಲಾರದೆ ಅಸಹಾಯಕನಾಗುವುದು ಮತ್ತೊಂದೆಡೆ. ಎರಡರ ಹೊಣೆಗಾರಿಕೆಗಳೂ ಮತ್ತೆ ಭೀಷ್ಮನನ್ನೇ ಬೆರಳುಮಾಡುತ್ತವೆ. ಪರಸ್ಪರ ಪೂರಕವಾಗಿ ಸಮಾಧಾನ ಹುಟ್ಟಿಸಬೇಕಾದ ಸಂಬಂಧಗಳು ಸಂಘರ್ಷವನ್ನೇ ಅನಿವಾರ್ಯವಾಗಿಸಿಕೊಂಡಾಗ ಭೀಷ್ಮನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಮಕ್ಕಳ ವಾತ್ಸಲ್ಯದ ಮುಗ್ಧತೆಯ ಭಾವವನ್ನು ನೋಡುತ್ತಾ, ಅನುಭವಿಸುತ್ತಾ ಅರಳಬಹುದಾಗಿದ್ದ ಭೀಷ್ಮ, ನರಳುವಂತಾಗುತ್ತದೆ. ಬಾಲ್ಯದ ಅವರ ನಡವಳಿಕೆ ಮತ್ತು ಬೆಳವಣಿಗೆಗಳು ನಾಳೆಗಳನ್ನು ನಿರ್ದೇಶಿಸುತ್ತವೆ.  ಭೀಷ್ಮನ ಭಾರ ಮತ್ತಷ್ಟು ಹೆಚ್ಚಾಗುತ್ತದೆ.

        ಯಾವುದೇ ವ್ಯವಸ್ಥೆಯನ್ನು, ಸಂದರ್ಭವನ್ನು ಇಡಿಯಾಗಿ ಒಬ್ಬನೇ ನಿಯಂತ್ರಿಸಬಹುದಾದಷ್ಟು ಶಕ್ತಿ, ಚಾತುರ್ಯ, ಬುದ್ಧಿಮತ್ತೆ ಇರುವ ಭೀಷ್ಮ ತನ್ನಮನೆಯ ಮಕ್ಕಳನ್ನೇ ನಿಯಂತ್ರಿಸದಂತಾಗುವುದು ಅವನ ವ್ಯಕ್ತಿತ್ವದೊಳಗಿನ ವಿಪರ್ಯಾಸವಾಗಿದೆ. ಪಾಂಡವರನ್ನು ಒಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಭೀಷ್ಮನಿಗೆ ದುರ್ಯೋಧನ ಮಾತ್ರ ದೊಡ್ಡ ಸವಾಲೇ ಆಗುತ್ತಾನೆ. ದುರ್ಯೋಧನನೆನ್ನುವುದೇ ಇಡೀ ಕೌರವರು ಎಂದಾದದ್ದು ಮತ್ತಷ್ಟು ಸಂಕಷ್ಟವೇ ಸರಿ. ಹಿರಿಯನಾದ ಭೀಷ್ಮನಂತೆಯೇ ಅವರ ವಿದ್ಯಾಗುರುಗಳಾದ ದ್ರೋಣ, ಕೃಪ ಮೊದಲಾದವರು ಸಹ ಈ ನಿಟ್ಟಿನಲ್ಲಿ ಅಸಹಾಯಕರೇ ಆಗಿಬಿಡುತ್ತಾರೆ.

         ತನ್ನ ತಾರುಣ್ಯದ ಉತ್ಸಾಹ, ಭಾವುಕತೆ, ತ್ಯಾಗದ, ಮೋಹದ ನೆಲೆಯಲ್ಲಿ ಅಂದು ಮಾಡಿದ ಪ್ರತಿಜ್ಞೆಯ ಲಾಲಿತ್ಯವೆ ಇಂದು ಆತ ಕೌರವರ ಬಗೆಗೆ ತಾಳುವ ನಿಲುವಾಗಿ ಅದು ಆ ಕಾರಣಕ್ಕೆ ಭೀಷ್ಮನ ಮಿತಿಯೂ ಆಗಿ ಕಾಣಿಸುತ್ತದೆ. ಇಲ್ಲಿಯೇ ಅವನು ತಾಳಬಹುದಾಗಿದ್ದ ಒಂದು ದೃಢವಾದ ನಿಲುವು ಮತ್ತು ಅಷ್ಟೇ ಖಡಾಖಂಡಿತವಾದ ನಿರ್ಧಾರಗಳು ಧೃತರಾಷ್ಟ್ರನನ್ನು, ಅವನ ಮಕ್ಕಳನ್ನು ನಿಯಂತ್ರಿಸಲು ಕಾರಣವಾಗಬಹುದಿತ್ತು ಎಂದು ತಕ್ಷಣಕ್ಕೆ ಅನಿಸಬಹುದಾದರೂ, ನಿರಾಕರಿಸಿದ ರಾಜ್ಯದ ಸಂಗತಿಯಲ್ಲಿ ಹಾಗೆ ಸ್ವಾತಂತ್ರ್ಯ ತೆಗೆದುಕೊಳ್ಳುವ ಪ್ರಯತ್ನಕ್ಕೆ ಆತ ಖಂಡಿತಾ ಮುಂದಾಗುವಂತಿರಲಿಲ್ಲ. ಅವನು ತನ್ನನ್ನು ತಾನೆ ಸಲಹೆ, ಪ್ರೀತಿ, ಕಳಕಳಿ ಎಂಬೆಲ್ಲಾ ಮಿತಿಗೆ ಒಳಪಡಿಸಿ ಕೊಂಡಂತೆನಿಸಿಬಿಡುತ್ತದೆ.

        ಭೀಷ್ಮನ ಸಹೃದಯತೆಯ ಈ ಮೃದುಧೋರಣೆಗಳು ಕೂಡ ಇತರರ ಮನಸ್ಸನ್ನು ಕಲಕುವುದಕ್ಕಾಗಲೀ, ಒಡೆಯುವುದಕ್ಕಾಗಲಿ ಅವಕಾಶ ನೀಡಲಿಲ್ಲ ವೆನ್ನಬಹುದು. ಭೀಷ್ಮನಾದರೂ ತುಂಬಾಸಲ ಬಹಳ ಆಶಾವಾದಿಯಾಗಿಯೇ ಕಂಡು ಬರುತ್ತಾನೆ. ಅವುಗಳೆಲ್ಲದರ ಫಲಿತವೆಂಬಂತೆ ಅವನು ಶರಮಂಚ ದವರೆವಿಗೆ ಸಾಗುವುದಾಗುತ್ತದೆ.

        ತನ್ನ ಕಣ್ಣೆದುರಿನಲ್ಲೇ, ಅರಿವಿನ ಜೊತೆಯಲ್ಲೇ ದುರ್ಯೋಧನ ಪಾಂಡವರ ವಿರುದ್ಧ ನಡೆಸುವ ಪ್ರತೀ ಸಂಚುಗಳ ಸಂದರ್ಭದಲ್ಲಿಯೂ ತೀರಾ ಅಸಹಾಯಕನಾಗಿ ಉಳಿಯಬೇಕಾಗುವ ಅವನ ಪರಿಸ್ಥಿತಿ ಸಂದರ್ಭದ ಒಂದು ದೊಡ್ಡವ್ಯಂಗ್ಯವೇ ಸರಿ. ಮುಪ್ಪಿನ ಕಾಲದ ಕಾರಣಕ್ಕಾಗಿ ಅವನನ್ನು ಆವರಿಸಿ ಕೊಳ್ಳುವುದಕ್ಕಿಂತ ಮಾನಸಿಕ ಹೊಡೆತಕ್ಕೆ ಆತ ಬಹಳಷ್ಟು ಜರ್ಝರಿತ ನಾಗುತ್ತಾನೆ. ಅದರಲ್ಲೂ ಮಹಾಭಾರತದ ಅತ್ಯುಗ್ರ ಶೋಷಣೆಯ, ಅನ್ಯಾಯದ ಪರಮಾವಧಿ ಎಂದುಕೊಳ್ಳಬಹುದಾದ ದ್ರೌಪದಿಯ ವಸ್ತ್ರಾಪಹರಣದ ಘಟನೆ ಭೀಷ್ಮನ ಮಾನಸಿಕ ನೆಮ್ಮದಿಯ ವಿನಾಶದ ಉತ್ಕರ್ಷವೇ ಆಗಿದ್ದೀತು. ತನ್ನ ಮನೆಯ ಕುಲಸ್ತ್ರೀಯನ್ನು ತನ್ನದೇ ಮನೆಯವನೊಬ್ಬ, ತುಂಬಿದ ಸಭೆಯಲ್ಲಿ ಇಷ್ಟೊಂದು ಅನಾಗರಿಕವಾಗಿ ಅವಮಾನ ಮಾಡುವುದನ್ನು ನೋಡಿಕೊಂಡೂ ಸುಮ್ಮನಿರಲೇಬೇಕಾದ ಪ್ರಸಂಗವನ್ನು ಭೀಷ್ಮನ ಇರುವಿಕೆಯಲ್ಲಿ ಕಲ್ಪಿಸುವುದಂತೂ ಕಡುಕಷ್ಟವೇ ಹೌದು.

        ಭೀಷ್ಮನಿಗೂ ಈ ಬಗೆಯ ಅಸಹಾಯಕತೆ ಉಂಟಾಯಿತೆಂದರೆ ಅವನ ಬಗೆಗಿನ ಅತ್ಯುನ್ನತಿಯ ಕಲ್ಪನೆಯನ್ನು ಒಪ್ಪಿಕೊಳ್ಳುವುದು ತುಸು ಕಷ್ಟ. ಬಹುಶಃ ಆ ಹೊತ್ತಿಗೆ ದ್ರೌಪದಿಗಾದರೂ ಭೀಷ್ಮನನ್ನು ಕುರಿತಂತೆ ನೂರುಪಟ್ಟು ನಿರಾಶೆ, ಸಿಟ್ಟು, ನೋವುಗಳೆಲ್ಲಾ ಉಂಟಾಗಿದ್ದಿರಬೇಕು. ಅವಳ ಯಾವ ಧರ್ಮಪರವಾದ ಪ್ರಶ್ನೆಗಳಿಗೂ ಅವನಲ್ಲಿ ಉತ್ತರವಿರುವಂತಿಲ್ಲ. ಆ ಕ್ಷಣಕ್ಕೆ ಭೀಷ್ಮನಿಗೆ ತನ್ನ ಬದುಕಿನ ಪ್ರತಿಜ್ಞೆ ತಂದೆ-ತಾಯಿ, ಆ ಕುರಿತ ಎಲ್ಲ ಬಗೆಯ ಅವಘಡಗಳು ಇತ್ಯಾದಿಗಳೆಲ್ಲವೂ ಮತ್ತಷ್ಟು ಕಾಡಿ-ಕಲಕಿ, ಅವನನ್ನು ಹಣ್ಣುಮಾಡಿದ್ದಿರಬಹುದು. ಹೀಗೆ ಇಂತಹ ಒಂದು ಘೋರ ಘಟನೆಗೆ ಸಾಕ್ಷಿಯಾದರು ಎನ್ನುವ ಕಾರಣದಿಂದಲೂ ಕುರುಕ್ಷೇತ್ರ ಅವರನ್ನೆಲ್ಲಾ ಬಲಿಬೇಡಿತ್ತೇನೋ?

        ತನ್ನ ಹಿರಿಯರು ಕಟ್ಟಿ ಕಾಪಾಡಿಕೊಂಡ ಸಾಮ್ರಾಜ್ಯ ವಂಶ ಪಾರಂಪರ್ಯವಾಗಿ ನಿರಂತರವಾಗಿ ಶ್ರೇಷ್ಠತೆಗಳ ಮಾದರಿಯಾಗಿಯೇ ಇರಬೇಕೆಂದು ಗಂಗಾಸುತ ಆಸೆಪಟ್ಟಿದ್ದ. ಅದೇ ವಂಶದ ಅವನ ಕಿರಿಯ ತಲೆಮಾರು ರಾಜ್ಯದಾಹದಿಂದ, ವೈಯಕ್ತಿಕ ಪ್ರತಿಷ್ಠೆಯ ಅಹಂಕಾರಗಳಿಂದ ಪರಸ್ಪರರು ಬಂಧುತ್ವವನ್ನು ಮೀರಿ ಶತ್ರುಗಳೇ ಆಗಿ, ಕುರುಕ್ಷೇತ್ರದಂತಹ ಮಹಾನಾಶದ ಮಹಾಸಂಗ್ರಾಮದೆಡೆಗೆ ದಾಪುಗಾಲಿಟ್ಟರು, ಭೀಷ್ಮನ ಬದುಕಿನ ದೊಡ್ಡವ್ಯಂಗ್ಯ ಮತ್ತು ದುರಂತ ಇಲ್ಲಿ ಕಾಣಸಿಗುತ್ತದೆ. ಇಲ್ಲಿಯೂ ಸರ್ವಸಮ್ಮತವಾದಂತೆ, ಮನಃಪೂರ್ವಕ ತೀರ್ಮಾನಕ್ಕೆ ಬದ್ಧನಾಗಲು ಅವನಿಂದ ಸಾಧ್ಯವಾಗುವುದಿಲ್ಲ.
ತಾನೇ ಮುದ್ದಾಡಿ, ಸಾಕಿ ಬೆಳೆಸಿದ ತನ್ನ ಮಕ್ಕಳ ವಿರುದ್ಧವೇ ಯುದ್ಧದ ನಾಯಕತ್ವ ವಹಿಸಬೇಕಾಗುತ್ತದೆ. ಒಂದೆಡೆಗೆ ಅನ್ನದ ಋಣವೆಂಬ ವಿಚಿತ್ರ ಬದ್ಧತೆ, ಮತ್ತೊಂದೆಡೆಗೆ ಪಾಂಡವರ ಬಗೆಗಿನ ನ್ಯಾಯ ಪರವಾದ ಪ್ರೀತಿ ಈ ಎರಡು ದ್ವಂದ್ವಗಳ ನಡುವೆ ಯಾರಿಗೂ ಒದಗಬಹುದಾದ ರೀತಿಯಲ್ಲಿ ವರ್ತಿಸುವುದು ಭೀಷ್ಮಾಚಾರ್ಯನಿಗೆ ಸಾಧ್ಯವೇ ಆಗುವುದಿಲ್ಲ.

        ಹದಿನೆಂಟು ದಿನಗಳ ಮಹಾಯುದ್ಧ, ಹತ್ತುದಿನಗಳ ಕಾಲ ದಂಡನಾಯಕನಾಗಿ ಯುದ್ಧ, ಶತ್ರುಪಾಳಯದಲ್ಲಿ ಅಂದರೆ ಪಾಂಡವರ ಸೈನ್ಯದಲ್ಲಿ ದಿನಕ್ಕೆ ಹತ್ತು ಸಾವಿರದಂತೆ ವೀರ ಯೋಧರನ್ನು ಬಲಿತೆಗೆದುಕೊಳ್ಳುವ ಅಸಹಾಯ ಶೂರತ್ವ ಪ್ರಕಟಿಸಿದಾಗ್ಯೂ ಅದು ದುರ್ಯೋಧನನಿಗೆ ಮಹತ್ವದ ಸಂಭ್ರಮವನ್ನು ತಂದುಕೊಡಲಿಲ್ಲ, ಗೆಲುವನ್ನು ಸೂಚಿಸುವುದಾಗುವುದಿಲ್ಲ. ಪಾಂಡವರೈವರಲ್ಲಿ ಯಾರೊಬ್ಬರನ್ನಾದರೂ ಕೊಲ್ಲಲಾಗದ ಭೀಷ್ಮರ ಶೌರ್ಯವನ್ನು ಇತರರೂ ಪ್ರಶ್ನಿಸುವಂತಾದದ್ದನ್ನು ನಿರಾಕರಿಸುವಂತಿಲ್ಲ.

        ಭೀಷ್ಮ ಪಾಂಡವರಲ್ಲಿ ಹಾಗೆ ಒಬ್ಬರನ್ನಾದರೂ ಕೊಂದಿದ್ದರೂ ಅದು ಇಡೀ ಪಾಂಡವರ ವಿರುದ್ಧದ ಗೆಲುವಾಗುತ್ತಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಯುದ್ಧದ ನಿರ್ಧಾರಿತ ಹದಿನೆಂಟು ದಿನಗಳಲ್ಲಿ ಅರ್ಧಕ್ಕಿಂತ ಹೆಚ್ಚು ದಿನಗಳನ್ನು ಯುದ್ಧಕ್ಕಾಗಿ ಭೀಷ್ಮನಂತಹ ಮಹಾಯೋಧ ಆವರಿಸಿಕೊಂಡಾಗಲು ಅದು ನಿರೀಕ್ಷಿತ ಗೆಲುವಿನ ಸಮೀಪವಾಗಲಿಲ್ಲವೆನ್ನುವ ವಿಪರ್ಯಾಸದಲ್ಲಿರುವುದು ಭೀಷ್ಮನ ನ್ಯಾಯಪರವಾದ ಪ್ರೀತಿಯೂ ಆಗಿರಬಹುದೆ? ಯುದ್ಧದ ಕೊನೆಯವರೆವಿಗೂ ಅವನಿಗೆ ಇದ್ದ ಒಂದೇ ಆಸೆ, ಕೌರವ ಪಾಂಡವರನ್ನು ಒಗ್ಗೂಡಿಸಲಾದೀತೆ?  ಎನ್ನುವುದೇ ಇದ್ದೀತು.

        ಕೃಷ್ಣನ ಪ್ರಮಾಣವನ್ನೇ ಮೀರಿಸುವಂತೆ ಅವನ ಕೈನಲ್ಲಿ ಸುದರ್ಶನ ಹಿಡಿಸುವಷ್ಟು ವೀರತ್ವದಿಂದ ಯುದ್ಧಮಾಡುವ ಭೀಷ್ಮನಿಗೆ ಪಾಂಡವರಲ್ಲಿ ಯಾರೊಬ್ಬರನ್ನಾದರೂ ದುರಂತಕ್ಕೆಡೆ ಮಾಡುವುದು ಕಷ್ಟವಿತ್ತೆ? ಎನ್ನುವ ಪ್ರಶ್ನೆಗೆ ಉತ್ತರ ಸರಳವಿಲ್ಲ. ಕೌರವರ ಪರವಾಗಿ ಯುದ್ಧಮಾಡುತ್ತಲೇ ಪಾಂಡವರೈವರನ್ನು ಕಾಪಾಡಿದಂತೆ ಕಾಣುವ ಭೀಷ್ಮ ಖಂಡಿತವಾಗಿ ಕೌರವನ ದೌರ್ಜನ್ಯಗಳಿಗೆ ರೋಸಿಹೋಗಿದ್ದಾನೆ. ಇದು ಎಂದಿಗಾದರೂ ನಡೆದೇ ತೀರಬೇಕು. ಯಾರಾದರೂ ಒಬ್ಬರು, ಅಂದರೆ ಪಾಂಡವರು ಅಥವಾ ಕೌರವರು ಉಳಿಯುವುದಷ್ಟೇ ಆ ಹೊತ್ತಿನ ಅನಿವಾರ್ಯ. ಅದರಾಚೆಗೆ ಯಾವ ಪರಂಪರೆಯ ಪೋಷಣೆಯೂ ಸಾಧ್ಯವಿಲ್ಲ. ಹಾಗಿರುವಾಗ ಉಳಿಯುವುದಾದರೆ ವಂಶಕೀರ್ತಿ ಉಳಿಸುವ ಶಕ್ತಿ ಇರುವ ಪಾಂಡವರೇ ಉಳಿಯಬೇಕಾದುದು ಸೂಕ್ತ. ಅವರು ನ್ಯಾಯಪರವಾಗಿದ್ದರು ಎನ್ನುವುದರಲ್ಲಿ ಭಿನ್ನಮತವಿಲ್ಲ ಬದುಕಿನ ಮೊದಲ ದಿನಗಳಿಂದಲೂ ಕಂಡುಕೊಂಡಿರುವ ಸತ್ಯವಿದು.

        ಕೃಷ್ಣನೇ ಪಾಂಡವರ ಪರನಿಂತಾಗ ಅದರಾಚೆಗೇನೋ ಸಾಧಿಸಬಹುದಾದ ಕಲ್ಪನೆ ಸುಲಭವಿಲ್ಲ.  ಇದು ನಡೆದೇ ತೀರಬೇಕಾದುದು, ತಾನು ತಪ್ಪಿಸಲಾಗುವುದಿಲ್ಲವೆಂದಾಗುವುದೇ ನಿಜವಾದಾಗ ಬೇರಾವ ಪರಿಶ್ರಮವಿದ್ದೀತು? ತನ್ನ ಕರ್ತವ್ಯವನ್ನು, ಮುಗಿಸಿ ಸಾಗಿಬಿಡಬೇಕು ಎನ್ನುವ ಬದುಕಿನ ಬಗೆಗಿನ ನಿರಾಸಕ್ತಿಯೇ ಮೈವೆತ್ತಂತೆ ಯುದ್ಧಮಾಡುತ್ತಾನೆ. ತನ್ನ ಯುದ್ಧ ಮುಕ್ತಾಯದ ಹಾದಿಯನ್ನು ಪಾಂಡವರು ಬೇಡುವ ಹೊತ್ತಿಗೆ ಅದರ ಮಾರ್ಗೋಪಾಯವನ್ನು ಆತನೇ ಸೂಚಿಸುತ್ತಾನೆ.

        ಈ ಯುದ್ಧದ ತನ್ನ ಪಾಲಿನ ಕೊನೆಯ ಋಣದಲ್ಲಿ ಆತನಾದರೂ ಶಿಖಂಡಿಗೂ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಇದೆ ಇದು ಕವಸಿರ್ಸಿದ್ಧಾಂತದ ಪರಿಯೂ ಹೌದು. ಅಂಬೆಯ ನೋವಿಗೆ, ಶಾಪಕ್ಕೆ, ಪ್ರತಿಕ್ರಿಯಿಸಲೇಬೇಕು. ಶಿಖಂಡಿಯ ನೆಪದಲ್ಲಿ ಯುದ್ಧವನ್ನು ಕೈಬಿಡುವ ಪಿತಾಮಹ ತಕ್ಷಣಕ್ಕೆ ಮುಕ್ತಿಯನ್ನು ಹೊಂದುವಂತೆಯೂ ಇಲ್ಲ. ತನ್ನಸಾವಿಗೆ ಮಕರಸಂಕ್ರಮಣವನ್ನು ಎದುರುನೋಡುವ ಅವನ ನಿಲುವನ್ನು ಒಂದು ನೆಪವಾಗಿಯೇ ಭಾವಿಸಬಹುದು. ಅವನಿಗೆ ಈ ಕುರುಕ್ಷೇತ್ರದ ಯುದ್ಧದ ಫಲಿತಾಂಶದ ಬಗೆಗೂ ಕುತೂಹಲವಿದೆ. ಆ ಬಗೆಯ ನಿರೀಕ್ಷೆಯಾದರೂ ಅವನಿಗೆ ಕರ್ತವ್ಯವೇ ಆಗಿದೆ. ತನ್ನ ವಂಶದ ಹಿರಿಮೆಯನ್ನು ಕಾಯ್ದುಕೊಳ್ಳಲು ಶಪಥ ಮಾಡಿದ್ದ ಆ ಮನಸ್ಸೇ ಇಂದಿಗೂ ತನ್ನ ಕುಲದ ಏಳ್ಗೆಗಾಗಿ ಹಂಬಲಿಸುತ್ತಿದೆ.

       ಆದರೆ ಭೀಷ್ಮಾಚಾರ್ಯನ ಸಾವಿನ ನಿರೀಕ್ಷೆಯಾದರೂ ಹೇಗೆ? ಎಲ್ಲಿ? ಎನ್ನುವುದೇ ಬದುಕಿನ ಗಂಭೀರತೆಗಳ ನೆಲೆಗಳನ್ನು ಕುರಿತು ಆತಂಕ ವ್ಯಕ್ತಪಡಿಸುವಂತಹುದು. ಅರ್ಜುನನಿಂದಲೇ ಕೇಳಿ ಸಿದ್ಧಪಡಿಸಿಕೊಂಡ ಬಾಣಗಳಿಂದ ನಿರ್ಮಿಸಲಾದ ಮಂಚದ ಮೇಲೆ ಮಲಗಿರುವ ಭೀಷ್ಮ, ಆ ನೋವನ್ನು ಅನುಭವಿಸುವ ಬಗೆಯಾದರೂ ಬಹುಶಃ ತನಗೆ ತಾನೇ ಶಿಕ್ಷಿಸಿಕೊಂಡ ಪರಿಯೇ ಎನಿಸುವುದುಂಟು. ತನ್ನ ಶಪಥದಿಂದ ಉಂಟಾದ ಕ್ರಮಲೋಪ ಈ ವಿನಾಶದವರೆಗೆ ತಂದು ನಿಲ್ಲಿಸಿರುವ ಬಗೆಗಿನ ಅವಲೋಕನದ ಪಶ್ಚಾತ್ತಾಪದಂತೆಯೇ ಈ ಪ್ರಸಂಗ ಕಾಣಿಸುತ್ತದೆ.

      ಶರಮಂಚದ ಮೇಲೆ ಮಲಗಿಯೂ ತನ್ನ ತೊಡೆ ಮೇಲಿನ ಮಕ್ಕಳನ್ನು ಆತ ನಿರ್ದೇಶಿಸುತ್ತಾನೆ.  ಪಾಂಡವರನ್ನು ರಕ್ಷಿಸಲು ಕೃಷ್ಣನೇ ಮುಂದಾಳಾಗಿರುವಾಗ ಆ ಬಗೆಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ ಕೌರವರ ಸ್ಥಿತಿ ಹಾಗಿಲ್ಲ, ಹಾಗಾಗಿ ಕೊನೇಪಕ್ಷ ಕೌರವರ ವಾರಸುದಾರನನ್ನಾಗಿ ದುರ್ಯೋಧನನನ್ನಾದರೂ ಉಳಿಸಬಹುದೇ? ಎನ್ನುವ ಹಂಬಲ. ಆದ್ದರಿಂದಲೆ ಕೊನೆಯಲ್ಲಿ ಏಕಾಂಗಿಯಾಗಿ ಬಂದು ತನ್ನ ಆಶೀರ್ವಾದ ಬೇಡುವ ಮೊಮ್ಮಗನಿಗಾಗಿ ಮಮ್ಮಲ ಮರುಗುತ್ತಾನೆ. ದುರ್ಯೋಧನನಿಂದ ಘಟಿಸಿರಬಹುದಾದ ಎಲ್ಲಾ ಅನ್ಯಾಯಗಳಾಚೆಗೂ ಆತ ಅವನ ವಂಶದ ಕುಡಿ ಎನ್ನುವುದನ್ನು ಬಾಂಧವ್ಯದ ನೆಲೆಯಲ್ಲಿ ನಿರಾಕರಿಸುವುದು ಸುಲಭಸಾಧ್ಯವೇ? ದುರ್ಯೋಧನನಿಗೆ ವೈಶಂಪಾಯನದ ಮಾರ್ಗೋಪಾಯವನ್ನು ತಾನೇ ಸೂಚಿಸುತ್ತಾನೆ. ಇಲ್ಲಿಯೂ ಭೀಷ್ಮನಿಗೆ ಕೊನೆಯದೊಂದು ದೂರದ ಆಸೆ. ಆದರೆ ದುರ್ಯೋಧನ ಛಲದಂಕಮಲ್ಲ, ಸಾವಿಗಂಜುವ ಮನುಷ್ಯನಲ್ಲ. ಅವನನ್ನು ಭೀಷ್ಮರಕ್ಷೆ ಕಾಯುವುದಾಗಲಿಲ್ಲ ಎನ್ನುವುದು ಮತ್ತೊಂದು ದುರಂತ. ಕೊನೆಗೆ ಅಂದುಕೊಂಡಂತೆ ತನ್ನ ವಂಶದ ವಾರಸುದಾರಿಕೆಗೆ ಸಮರ್ಥರಾದ ಪಾಂಡವರಿಗೆ ದೊರಕಿತೆಂಬ ತೃಪ್ತಿಯಲ್ಲೇ ಆತ ಪ್ರಾಣಬಿಡುತ್ತಾನೆ.

       ವಿಪರ್ಯಾಸಗಳೊಂದಿಗೆ ಹುಟ್ಟಿದವನೆನ್ನಬಹುದಾದ ಗಂಗಾತನಯ ಒಂದರ್ಥಕ್ಕೆ ತಂದೆ-ತಾಯಿಯರಿಬ್ಬರ ಪ್ರೀತಿಯೊಳಗಿದ್ದೂ ಅಪೂರ್ಣನೆ!. ಯೌವನದಲ್ಲಿ ಸಹಜವಾದ ವೈಯಕ್ತಿಕ ಸುಖಗಳಿಂದ ವಂಚಿತನಾದರೂ ಕ್ಷತ್ರಿಯತ್ವದ ಇಡೀ ಪರಂಪರೆಯ ಕದಲುವಿಕೆಯ ಪ್ರತೀ ಭಾವಕ್ಕೆ ಸಾಕ್ಷಿಯಾಗುತ್ತಾ, ಬದುಕಿನುದ್ದಕ್ಕೂ ನೋವನ್ನು ಅನುಭವಿಸುತ್ತಲೇ, ಸಹಿಸಿ ನಗುತ್ತಾನೆ. ಕೊನೆಯವರೆಗೂ ಪಲ್ಲಂಗದಲ್ಲಿದ್ದು ನಿದ್ರಿಸಲಾಗದೆ ಚಡಪಡಿಸುವ ಮಹಾನುಭಾವ ಭೀಷ್ಮ ಅವುಗಳೆಲ್ಲದರ ಸ್ಮೃತಿಯೆಂಬಂತೆ ಯುದ್ಧರಂಗದಲ್ಲಿ ಬಾಣಗಳ ಮೇಲೆ ಮಲಗಿ ತನ್ನ ಬದುಕನ್ನೇ ಸಂಕೇತಿಸುತ್ತಾನೆ. . . .
 
bottom of page